ವಿ.ಸ್ಯಾನ್ ಇನ್ಫ್ರಾಸ್ಟ್ರಕ್ಚರ್ ಪ್ರೈ.ಲಿ. ಸಂಸ್ಥೆಯೂ ಆಟೋರಾಜ ಚಿತ್ರದ ನಂತರ ನಿರ್ಮಿಸುತ್ತಿರುವ, ಕೃಷ್ಣನ್ ಮ್ಯಾರೇಜ್ ಸ್ಟೋರಿ ಖ್ಯಾತಿಯ ನೂತನ್ ಉಮೇಶ್ ನಿರ್ದೇಶನವಿರುವ ಅಸ್ತಿತ್ವ ಕನ್ನಡ ಚಲನಚಿತ್ರದ ಸಂಕಲನ, ಧ್ವನಿಮುದ್ರಣ ಕೆಲಸಗಳು ಮುಗಿದು, ಚಿತ್ರ ರೀರೆಕಾರ್ಡಿಂಗ್, ಡಿಐ ಹಂತದಲ್ಲಿದೆ. ಇತೀಚೆಗಷ್ಟೇ ಚಿತ್ರದ ಒಂದು ಹಾಡನ್ನು ಬೆಂಗಳೂರಿನ ಅಂಡರ್ಡಾಗ್ಸ್ ಸ್ಪೋರ್ಟ್ಸ ಬಾರ್ ಮತ್ತು ನೋ ಲಿಮಿಟ್ಸ್ ಪಬ್ನಲ್ಲಿ ಚಿತ್ರೀರಕರಿಸಲಾಗಿದ್ದು, ೨೦ ಜನ ನೃತ್ಯಗಾರರು, ೮೦ ಜನ ಸಹಕಲಾವಿದರನ್ನು ಬಳಸಿಕೊಂಡು ನೃತ್ಯ ನಿರ್ದೇಶಕ ಕಲೈಯವರು ಹಾಡನ್ನು ಚಿತ್ರೀಕರಿಸಿದರು. ಚಿತ್ರದ ಮುಖ್ಯಭೂಮಿಕೆಯಲ್ಲಿ ನಾಯಕನಾಗಿ ಹೊಸಪ್ರತಿಭೆ ಯುವರಾಜ್ರನ್ನು ಪರಿಚಯಿಸಲಾಗುತ್ತಿದೆ. ಮಧುಸೂದನ್ ಎಂಬ ಮತ್ತೊಬ್ಬ ಪ್ರತಿಭೆಯನ್ನು ಈ ಚಿತ್ರದ ಮೂಲಕ ಪರಿಚಯಿಸಲಾಗುತ್ತಿದೆ. ಚಿತ್ರಕ್ಕೆ ಪ್ರಜ್ವಲ್ ಪೂವಯ್ಯ, ದುನಿಯಾ ರಶ್ಮಿ, ಸೋನುಗೌಡ ಸೇರಿದಂತೆ ಒಟ್ಟು ಮೂವರು ನಾಯಕಿಯರು. ಉಳಿದಂತೆ ಎಡಕಲ್ಲು ಗುಡ್ಡದ ಚಂದ್ರಶೇಖರ್, ರಾಜೇಶ್ ನಟರಂಗ, ಶೈನ್ ಶೆಟ್ಟಿ, ಕೆ.ಎಸ್. ಶ್ರೀಧರ್, ನಾಗರಾಜ್ ಮೂರ್ತಿ, ಗಾಯಕ ಶಶಿಧರ್ಕೋಟೆ, ಶೈಲಜಾ ಜೋಶಿ ಮುಂತಾದವರು ಮುಖ್ಯಪಾತ್ರಗಳಲ್ಲಿ ನಟಿಸಿದ್ದಾರೆ. ರಾಕೇಶ್ ಬಿ. ಛಾಯಗ್ರಹಣ, ಶ್ರೀಕ್ರೇಜಿಮೈಂಡ್ಸ್ ಸಂಕಲನ, ಶಿವಕುಮಾರ್ ಜೆ ಕಲೆ, ವಿಜಯ್ ಆಂಟೋನಿ ಸಂಗೀತವಿದೆ.